Saturday 5 March 2016

ಬಾಂಗ್ಲಾದೇಶೀಯರ ಅತಿರೇಕ..! ಧೋನಿ ತಲೆಕಡಿದು ತಸ್ಕಿನ್ ಅಹ್ಮದ್ ಪೋಸ್ ಕೊಟ್ಟ ಪೋಸ್ಟರ್..!



ಮೀರ್'ಪುರ್(ಮಾ. 05): ಕಳೆದೊಂದು ವರ್ಷದಿಂದ ಬಾಂಗ್ಲಾದೇಶ ಹೊಸ ಹುರುಪಿನೊಂದಿಗೆ ಗಮನ ಸೆಳೆಯುತ್ತಿದೆ. ಆಟಗಾರರಲ್ಲಿ ಹೊಸ ಹುಮ್ಮಸ್ಸಿದೆ. ಎಂಥದ್ದೇ ತಂಡವನ್ನಾದರೂ ಸೋಲಿಸಬಲ್ಲೆ ಎಂಬ ಆತ್ಮವಿಶ್ವಾಸವಿದೆ. ಕ್ರಿಕೆಟ್ ಅಭಿಮಾನಿಗಳ ಹುಮ್ಮಸ್ಸೂ ತಾರಕಕ್ಕೇರುತ್ತಿದೆ. ಈ ಹುರುಪಿನ ಭರದಲ್ಲಿ ಅದೆಲ್ಲೋ ಅಹಂಕಾರವೂ ಸೇರುತ್ತಿದೆಯಾ ಎಂಬ ಅನುಮಾನ ಮೂಡುವಂತಿದೆ ಹೊಸ ಪೋಸ್ಟರ್. ಭಾನುವಾರ ನಡೆಯಲಿರುವ ಭಾರತ-ಬಾಂಗ್ಲಾ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಪೂರ್ವಬಾವಿಯಾಗಿ ಅಭಿಮಾನಿಗಳು ಹೊಸ ಪೋಸ್ಟರ್ ತಯಾರಿಸಿದ್ದಾರೆ. ಅದರಲ್ಲಿ ಬಾಂಗ್ಲಾದ ಯುವ ಪ್ರತಿಭಾನ್ವಿತ ವೇಗದ ಬೌಲರ್ ತಸ್ಕಿನ್ ಅಹ್ಮದ್ ಅವರು ಮಹೇಂದ್ರ ಸಿಂಗ್ ಧೋನಿಯ ಕಡಿದ ತಲೆಯನ್ನು ಕೈಯಲ್ಲಿಡಿದು ವಿಜೃಂಬಿಸುತ್ತಿರುವ ಚಿತ್ರವು ಈ ಪೋಸ್ಟರ್'ನಲ್ಲಿದೆ. ಪಂದ್ಯಕ್ಕೆ ಕಾವು ಹೆಚ್ಚಾಗಲಿ ಎಂಬ ಕಾರಣಕ್ಕೆ ಆಟಗಾರರಿಂದ ಸವಾಲು-ಪ್ರತಿಸವಾಲುಗಳು ನಡೆಯುವುದು ಸಾಮಾನ್ಯ. ಆದರೆ, ಈ ಪೋಸ್ಟರ್'ನಲ್ಲಿ ಬಾಂಗ್ಲಾದೇಶೀಯರು ಹದ್ದುಮೀರಿ ವರ್ತಿಸಿರುವುದು ಸ್ಪಷ್ಟವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟರ್ ಬಹಳ ವೈರಲ್ ಆಗಿ ಹರಡುತ್ತಿದೆ.

ಹಿಂದೆ ಭಾರತೀಯರ ತಲೆಬೋಳಿಸಿದ್ದರು..

ಬಾಂಗ್ಲಾದೇಶೀಯರ ಈ ಅತಿರೇಕದ ವರ್ತನೆ ಇದು ಎರಡನೇ ಬಾರಿ. 2015ರಲ್ಲಿ ಬಾಂಗ್ಲಾದೇಶದಲ್ಲಿ ಏಕದಿನ ಸರಣಿಯನ್ನು ಭಾರತ ಸೋತಿತ್ತು. ಅದಾದ ನಂತರ ಬಾಂಗ್ಲಾದೇಶದ ಪತ್ರಿಕೆಯೊಂದು ಭಾರತೀಯ ಕ್ರಿಕೆಟಿಗರನ್ನು ಅಣಕು ಮಾಡುವಂಥದ್ದೊಂದು ಫೋಟೋವನ್ನು ಪ್ರಕಟಿಸಿತು. ಆ ಪೋಸ್ಟರ್'ನಲ್ಲಿ ಮುಸ್ತಾಫಿಜುರ್ ರಹಮಾನ್ ಕೈಯಲ್ಲಿ ಕಟ್ಟರ್ ಹಿಡಿದು ಪೋಸ್ ಕೊಡಿಸಲಾಗಿತ್ತು. ಧೋನಿ, ಕೊಹ್ಲಿ, ರೋಹಿತ್ ಸೇರಿದಂತೆ ಏಳು ಭಾರತೀಯ ಆಟಗಾರರ ತಲೆಯನ್ನು ಅರ್ಧಬೋಳಿಸಿದಂತೆ ತೋರಿಸಲಾಗಿತ್ತು. ನಾವು ಬಳಸಿದ್ದೇವೆ. ನೀವೂ ಬಳಸಿರಿ ಎಂಬ ಬ್ಯಾನರು ಭಾರತೀಯರ ಕೈಯಲ್ಲಿತ್ತು.
ಆ ಏಕದಿನ ಸರಣಿಯಲ್ಲಿ ಮುಸ್ತಾಫಿಜುರ್ ರೆಹಮಾನ್'ನ ಆಫ್ ಕಟ್ಟರ್'ಗಳ ಬೌಲಿಂಗ್ ದಾಳಿಯನ್ನು ಎದುರಿಸಲು ಭಾರತೀಯರು ಪರದಾಡಿ, ಸರಣಿ ಸೋಲನುಭವಿಸಿದ್ದರು. ಮುಸ್ತಾಫಿಜುರ್'ನ ಆ ಆಫ್ ಕಟ್ಟರ್ ಬೌಲಿಂಗ್'ನ ಪ್ರತೀಕವಾಗಿ ಮೇಲಿನ ಕಟ್ಟರ್ ಜಾಹೀರಾತಿನ ಪೋಸ್ಟರ್ ಮಾಡಲಾಗಿತ್ತು.

 courtesy : suvarna news
http://www.suvarnanews.tv

No comments:

Post a Comment